Monday, May 17, 2010

ಸ್ವಲ್ಪ ಅಡ್ಜಸ್ಟ್ ಮಾಡ್ಕೊಳಿ



ನಸು ಕಾಣುವುದಕ್ಕು ಪುಣ್ಯ ಮಾಡಿರಬೇಕು,ಅದರಲ್ಲೂ ಓಳ್ಳೇ ಕನಸು ಕಾಣಬೇಕಂದ್ರೆ ಪುಣ್ಯ ಇನ್ನೊಂದೆರಡು ಕೆ.ಜಿ.ಜಾಸ್ತಿನೇ ಮಾಡಿರ್ ಬೇಕು,ಕೆಟ್ ಕನಸು ಕಾಣಬೇಕು ಅಂದ್ರೆ ಪಾಪ ಪುಣ್ಯ ಲೆಕ್ಕಕ್ಕೆ ಬರೋಲ್ಲ...ನಿಮಗೆ ಒಂದ್ ಪ್ರಶ್ನೆಗೂ ಉತ್ತರ ಗೊತ್ತಿಲ್ದೆ ಇರೋ ಕ್ವಶ್ಚನ್ ಪೇಪರ್ ಕೊಟ್ಟಾಗ,ಜೇಬಲ್ಲಿ ಕಾಸ್ ಇಲ್ದಾಗ,ಪ್ರಾಜೆಕ್ಟ್ ಡೆಡ್ ಲೈನ್ ಹತ್ರ ಬಂದಾಗ,ಬಜೆಟ್ಟಲ್ಲಿ ಪೆಟ್ರೋಲ್,ಸಿಗರೇಟು,ಎಣ್ಣೆ ರೇಟ್ ಜಾಸ್ತಿ ಆದಾಗ ಚೂರು ಪಾರು ಕೆಟ್ ಕನಸು ಬೀಳೋದು ಗ್ಯಾರಂಟಿ.ಅಂದ ಹಾಗೆ ನೀವು ಎಲ್ಲಿ ತನಕ ಕನಸು ಕಾಣ್ತೀರಾ, ಸಚಿನ್,ಅಂಬಾನಿ,ಮಲ್ಯ,ಅಮಿತಾಭ್ ಬಚ್ಚನ್ ರೇಂಜ್ ವರೆಗೂ ಕನಸು ಇದ್ದೇ ಇರುತ್ತೆ,ಸಚಿನ್ ತರ ಶೇನ್ ವಾರ್ನ್ ಗೆ ಹಿಗ್ಗುಮುಗ್ಗ ಸಿಕ್ಸ್ ಹೊಡಿಬೇಕು,ಅಂಬಾನಿ ತರ ಕೋಟಿ ಕೋಟಿ ದುಡ್ ಮಾಡ್ ಬೇಕು,ಮಲ್ಯ ತರ ಫುಲ್ ಪಂಕಾಗಿ ಅಕ್ಕ ಪಕ್ಕ ಸೂಪರ್ ಮಾಡೆಲ್ಸ್ ಹಾಕೊಂಡು ಬೆನ್ಝ್ ಕಾರಲ್ಲಿ ಓಡಾಡ್ಕೊಂಡು ಶೋಕಿ ಮಾಡ್ ಬೇಕು,ಅಮಿತಾಭ ತರ ಸ್ಟೈಲಿಶ್ ಆಗಿ ಆಕ್ಟರ್ ಆಗ್ಬೇಕು ಇದೆಲ್ಲಾ ನಾರ್ಮಲ್ ಆಗಿ ಇರ‍ೋ ಕನಸುಗಳು....ನಾನ್ ಎಲ್ಲಿವರೆಗೂ ಕನಸು ಕಾಣ್ತೀನಿ ಅಂದ್ರೆ ಬೆಳಿಗ್ಗೆ ಎಚ್ಚರ ಆಗೋವರೆಗೂ ಕನಸು ಕಾಣ್ತೀನಿ....ಅಮೇಲೆ ಎಲ್ಲಾ ಬರೀ ಅಡ್ಜಸ್ಟ್ ಮಾಡ್ಕೋಳೊದೆ....ಬೆಳಿಗ್ಗೆ ಸ್ನಾನಕ್ಕೆ ಬಿಸಿನೀರು ಇಲ್ದೆ ಇದ್ದಾಗಿಂದ ಹಿಡ್ದು ರಾತ್ರಿ ಮಲಗಿದ್ದಾಗ ಸೊಳ್ಳೆ ಕಚ್ಚೊತನಕನೂ ಬರೀ ಅಡ್ಜಸ್ಟ್ ಮಾಡ್ಕೋಳೊದೆ ಆಯ್ತು....ಅದರಲ್ಲೂ ಜನ ಹೇಳೋದನ್ನ ಕೇಳಬೇಕು """ಯಾಕ್ರಿ ಅಂಗಾಡ್ತೀರಾ ಸ್ವಲ್ಪ ಅಡ್ಜಸ್ಟ್ ಮಾಡ್ಕೊಳ್ರಿ"""""....??.....ಇದೊಂದ್ ಮಾತು ನೀವ್ ತುಂಬಾ ಕಡೆ,ಬೇಕಾದಷ್ಟು ಜನರ ಬಾಯಿಂದ,ಬಹಳಷ್ಟು ಸಲ ಕೇಳೇ ಇರ್ತೀರಾ.....ಯಾವದಾದ್ರು ಅಂಗಡಿಲಿ ಏನಾದ್ರು ತಗೊಂಡ್ ಮೇಲೆ ಚಿಲ್ಲರೆಯಾಗಿ ಹಳೆ ನೋಟ್ ಕೊಟ್ರು ಅಂತಿಟ್ಟುಕೊಳ್ಳಿ,ಅವಾಗ ನೀವು "ಈ ನೋಟ್ ಹೋಗೊಲ್ಲ ಬೇರೆದ್ ಇದ್ರೆ ಕೊಡ್ರಿ" ಅಂತಾ ಕೇಳ್ತೀರಾ ಅವಾಗ ಅವನು ಹೇಳ್ತಾನೆ..."ರೀ,ಸ್ವಾಮಿ ಸದ್ಯಕ್ಕೆ ಇದೇ ಇರೋದು,ಸ್ವಲ್ಪ ಅಡ್ಜಸ್ಟ್ ಮಾಡ್ಕೊಳ್ರಿ ಏನ್ ನಾನೇನ್ ಇಲ್ಲಿ ಹೊಸ ನೋಟ್ ಪ್ರಿಂಟ್ ಮಾಡೋಲ್ಲ,ಬಸ್ ಕಂಡಕ್ಟರ್ ಗೆ ಕೊಡ್ರಿ ನೆಡೆಯುತ್ತೆ..."....ಸರಿ ಇನ್ನೇನ್ ಮಾಡೋಕೆ ಅಗುತ್ತೆ ಅಂತ ಬಿಎಂಟಿಸಿ ಹತ್ತಿ ಕಂಡಕ್ಟರ್ ಗೆ ಆ ನೋಟ್ ಕೊಟ್ರೆ ಆ ದೊರೆ ನೋಟೇನೊ ತಗೊಬಹುದು ಚಿಲ್ಲರೆ ಮಾತ್ರ ಟಿಕೆಟ್ ಹಿಂದೆ ಬರೆದು ಇಳಿಬೇಕಾದ್ರೆ ಈಸ್ಕೊಳ್ರಿ ಅಂತ ಹೇಳ್ತಾರೆ, ನೀವೇನಾದ್ರು ಜಾಸ್ತಿ ಮಾತಾಡಿದ್ರೆ "ರೀ ನಿಮ್ ಈ ಪುಟ್ಕೋಸಿ ದುಡ್ಡು ತಗೊಂಡು ನಾನೇನ್ ಓಡಿ ಹೋಗಲ್ಲ ,ಚೂರು ಅಡ್ಜಸ್ಟ್ ಮಾಡ್ಕೊಳ್ರಿ ನೀವ್ ಇಳಿಬೇಕಾದ್ರೆ ಕೊಡ್ತೀನಿ " ಅಂತ ಫುಲ್ ಆವಾಜ್....ನಿಮಗೂ ಇದ್ರಿಂದ ತಲೆ ಕೆಟ್ಟು ಒಂದ್ ಚೂರ್ ರಿಲಾಕ್ಸ್ ಆಗೋಣ ಅಂತ ಸಿನಿಮಾಗೆ ಹೋದ್ರೆ ಟಿಕೆಟ್ ಸಿಗದೆ ಬ್ಲಾಕಲ್ಲಿ ಟಿಕೆಟ್ ತಗೋಬೇಕು ...ಅಲ್ಲೂ ಅಡ್ಜಸ್ಟ್ ಮೆಂಟು....ಹಾಳಾಗ್ ಹೋಗ್ಲಿ ಅತ್ಲಾಗೆ ಮನೆಗೆ ಹೋಗೋಣ ಅಂತ ಹೋಗಿ ಟಿ.ವಿ ಹಾಕುದ್ರೆ ನಮ್ ಸಿ.ಎಂ.ಟಿವೀಲಿ ಭಾಷಣ ಮಾಡಬೇಕಾದ್ರೆ "" ವಿದ್ಯುತ ಸಮಸ್ಯೆಯ ಬಗ್ಗೆ ನಮಗೆ ಅರಿವಿದೆ, ಇನ್ನೆರಡು ವರ್ಷ ಕರ್ನಾಟಕದ ಜನತೆ ಅಡ್ಜಸ್ಟ್ ಮಾಡ್ಕೋಬೇಕು ,ಅಷ್ಟರಲ್ಲಿ ವಿದ್ಯುತ್ಗೆ ಒಂದು ಪರಿಹಾರ ಕೊಡ್ತೀವಿ... "" ಅಂತ ಮಾತು ಮುಗಿಸುವಷ್ಟರಲ್ಲಿ ಕರೆಂಟ್ ಕಟ್...ಈಗ ಮತ್ತೊಂದ್ ಸಲ ಅಡ್ಜಸ್ಟ್ ಮಾಡ್ಕೊಳಿ.
ಈ ಅಡ್ಜಸ್ಟ್ ಆನ್ನೋದು ಬರಿ ಸಾಮಾನ್ಯ ಮನುಷ್ಯರಿಗಷ್ಟೆ ಅಲ್ಲ.....ಇದು ಇನ್ನು ಹೈ ಲೆವಲ್ ಆಗಿ ನಡೆಯುತ್ತೆ....ಕುರ್ಚಿಗೋಸ್ಕರ ನಿನ್ನೆ ಮೊನ್ನೆ ತನಕ ಹಾವು ಮುಂಗುಸಿ ತರ ಕಚ್ಚಾಡ್ತ ಇದ್ದೋರು ಸಮ್ಮಿಶ್ರ ಸರ್ಕಾರ ಅಂತ "ಅಡ್ಜಸ್ಟ್ " ಆಗ್ತಾರೆ, ಎಲೆಕ್ಷನ್ ಟೈಮಲ್ಲಿ ಸೀರೆ,ಸಾರಾಯಿ ಕೊಟ್ಟು ಮತದಾರರು ಫುಲ್ ಅಡ್ಜಸ್ಟ್ ಅಗ್ತಾನೆ ಇರ್ತಾರೆ, ಕಾವೇರಿ ನೀರಿಗಾಗಿ ಕರ್ನಾಟಕ ತಮಿಳುನಾಡು "ಅಡ್ಜಸ್ಟ್ " ಮಾಡ್ಕೋತಾರೆ, ಡೆಲ್ಲಿ ಮತ್ತೆ ಲಾಹೋರ್ ಮಧ್ಯ ಬಸ್ ಬಿಟ್ಟು ಭಾರತ ಪಾಕಿಸ್ತಾನದ ಜೊತೆ "ಅಡ್ಜಸ್ಟ್ "" ಅಗುತ್ತೆ, ಮ್ಯಾಚ್ ಗೆದ್ರು ಸಿಗದೆ ಇರುವಷ್ಟು ಹಣ ಬೆಟ್ಟಿಂಗ್ ಹಣ ತಗೊಂಡು ಕ್ರಿಕೆಟಿಯರ್ಸೆ "ಅಡ್ಜಸ್ಟ್ " ಆಗ್ಬಿಟ್ಟಿರ್ತಾರೆ...,
ಈ ಅಡ್ಜಸ್ಟ್ ಮೆಂಟ್ ಲಿಸ್ಟ್ ಹೇಳ್ತಾ ಹೋದಷ್ಟು ಇನ್ನು ದೊಡ್ಡದಾಗುತ್ತ ಹೋಗುತ್ತೆ...ಒಂದ್ ಕ್ಷಣ ನಾವು ಇದನ್ನು ಬಿಟ್ಟು ಯೋಚನೆ ಮಾಡಿದರೆ ಹೇಗಿರುತ್ತೆ?? ಈ ರೀತಿ ಇರೋದ್ರಿಂದಾನೆ ನಮ್ಮ ಜೀವನ ನಡೆಯುತ್ತಾ ಇದ್ಯಾ,...?? ಇದಕ್ಕಾಗಿ ನಾವು ಹೇಗೆ ಬದಲಾಗಬೇಕು ಅಥವಾ ನಮಗಾಗಿ ನಾವು ಏನನ್ನು ಬದಲಾಯಿಸಬೇಕು....ಪ್ರಶ್ನೆ ..ಪ್ರಶ್ನೆ ಆಗಿಯೇ ಉಳಿಯುತ್ತೆ ,,,,ಏಕೆಂದರೆ ಇದರ ಉತ್ತರ ಪ್ರತಿಯೊಬ್ಬರು ತಾವು ಮಾಡುವ ಕೆಲಸದಲ್ಲಿ ತೋರುವ ಶ್ರದ್ದೆ,ವಹಿಸುವ ಪಾತ್ರ,ಅದರಿಂದ ಅನ್ಯರಿಗೆ ಆಗುವ ಉಪಯೋಗ,ಅನಾನುಕೂಲದಂತಹ ವಿಚಾರಗಳಲ್ಲಿ ಅಡಗಿರುತ್ತದೆ.
ಪ್ರತಿಯೊಬ್ಬರು ದಿನ ಯಾವುದಾದರು ಒಂದ್ ವಿಷ್ಯಕ್ಕೆ ಅಡ್ಜಸ್ಟ್ ಮಾಡ್ಕೊಂತಾನೇ ಇರ್ತೀರಾ...ಕೆಲವು "ಅಡ್ಜಸ್ಟ್ " ಮಾಡ್ಕೊಂಡಿರೊ ವಿಷಯಗಳೇ ಜೀವನದಲ್ಲಿ ನಮಗೆ ಮುಖ್ಯ ಅನ್ಸೋಕೆ ಶುರು ಅಗುತ್ತೆ, ನಮಗೆ ಅರಿವಿಲ್ಲದಂತೆ ನಾವು ಅದನ್ನು ಸಂಪೂರ್ಣ ರೀತೀಲಿ ಒಪ್ಪಿಕೊಂಡಿರುತ್ತೀವಿ ,ಆ ವಿಷಯಗಳು ಸ್ವಲ್ಪ ಕಷ್ಟ ಇದ್ರೂ ಸಹಜವಾಗಿರುತ್ತೆ.ಈ ಅಸಹಜವಾದ ಸಹಜತೆಯ ಬೇರನ್ನು ಹುಡುಕಿಕೊಂಡು ಹೋದಷ್ಟು ಆಳ ನಾವು ಇಲ್ಲಿವರೆಗೂ ಯಾವುದಕ್ಕೆ "ಅಡ್ಜಸ್ಟ್ " ಆಗಿದ್ದೀವೋ ಅವೆಲ್ಲಾ ಎಳೆ ಎಳೆ ಆಗಿ ಇನ್ನೊಂದು ಮತ್ತೊಂದು ಬೇರಿಗೆ ಬೆಸುಗೆ ಹಾಕಿಕೊಂಡು ಬಿಡಿಸಲಾಗದ ಕಗ್ಗಂಟಾಗಿರುತ್ತೆ ,ಸರಿ ಆ ಕಗ್ಗಂಟು ಬಿಡಿಸೋಣ ಅಂತ ಶುರು ಮಾಡೋಕೆ ಅದರ ಕೊನೆ ಯಾವುದು,ತುದಿ ಯಾವುದು ಅಂತ ತಿಳಿಯುವುದಲ್ಲಿಯೇ ಅರ್ಧ ಜೀವನ ಮುಗಿದು ಹೋಗುತ್ತೆ....ಅಷ್ಟೊಂದ್ ಟೈಮ್ ಯಾಕೆ ವೇಸ್ಟ್ ಮಾಡೋದು....ಆ ಕಗ್ಗಂಟು ಬಿಡಿಸೋದೇ ಬೇಡ...ಅದು ಹಾಗೆ ಇರಲಿ..ನಾವು ಹೀಗೆ ಇರೋಣ ...."ಸ್ವಲ್ಪ ಅಡ್ಜಸ್ಟ್ " ಮಾಡ್ಕೊಂಡ್ ಇದ್ರೆ ಆಯ್ತು ಎನ್ನುವ ನಮ್ಮ ಬದುಕಿನ ಧ್ಯೇಯ ವಾಕ್ಯವನ್ನ ಪಾಲಿಸಿಕೊಂಡು ಹೋಗುವರಲ್ಲಿ ನಾವು ನೀವು ಎಲ್ಲರೂ ಇದ್ದೀವಿ.

0 comments:

Post a Comment